Wednesday, October 22, 2008

3. ಒಂದು "ಹಾಲಿನ" ಕತೆ

ಇದು ನಡೆದದ್ದು ೨೦೦೩ರಲ್ಲಿ ದಿವಾಕರ ರೈ ಎಂಬ ಧೀಮಂತ ರೈತ ದ.ಕ. ಸಹಕಾರಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷನಾಗಿದ್ದಾಗ.
ಕರ್ನಾಟಕದ ಉಳಿದ ಸಂಘಗಳಿಗೆ ಹೋಲಿಸಿದರೆ ವೃತ್ತಿಪರತೆಯಲ್ಲಿ ಡಿ.ಕೆ.ಎಂ.ಯು.ಎಲ್. ಮುಂಚೂಣಿಯಲ್ಲಿತ್ತು.

ದಕ್ಷಿಣ ಕನ್ನಡದಲ್ಲಿ ಹಾಲು ಸಹಕಾರಿ ಚಳುವಳಿ ೧೯೮೬ರಲ್ಲಿ ಪ್ರಾರಂಭವಾಗಿದ್ದರೂ ಸಾಮಾನ್ಯ ಗ್ರಾಹಕನಿಗೆ ಅದರ ತಿಳಿವು ಹೆಚ್ಚಿರಲಿಲ್ಲ. ಹಾಲು ಮಂಡ್ಯದಿಂದಲೋ ಮೈಸೂರಿನಿಂದಲೋ ಬರುತ್ತಿರಬಹುದು ಎನ್ನುವ ಅಭಿಪ್ರಾಯ ಹೆಚ್ಚಿನವರಲ್ಲಿತ್ತು. ಅದು ದಕ್ಷಿಣ ಕನ್ನಡದ ರೈತರ ಕ್ರಾಂತಿ ಎನ್ನುವುದು ಜನರಿಗೆ ಮುಟ್ಟಬೇಕಾದ ಅಂಶವಾಗಿತ್ತು. ಖಾಸಗಿ ವಲಯದ ಕೆಲವು ಬ್ರಾಂಡುಗಳು ನೀಡುತ್ತಿದ್ದ ಪೈಪೋಟಿ ಬಹಳ ಕ್ಷೀಣವಾಗಿದ್ದರೂ ಜನ ಸಾಮಾನ್ಯರು ನಂದಿನಿ ಸೊರಗಿದೆ ಎನ್ನುವ ಅಭಿಪ್ರಾಯ ವ್ಯಕ್ತ ಪಡಿಸಿದ್ದರು. ನಿಜ ಸಂಗತಿ ಏನು ಎಂದು ತಿಳಿಯ ಪಡಿಸಿ ಬ್ರಾಂಡ್ ಮೌಲ್ಯವನ್ನು ಹೆಚ್ಚಿಸುವ ಕೆಲಸ ಅವಶ್ಯವಿತ್ತು. 

ಸಂಘವು ಮಾರುಕಟ್ಟೆಗೆ ನಂದಿನಿ Standardised ಹಾಲನ್ನು ಹೆಚ್ಚು ಗದ್ದಲವಿಲ್ಲದೆ ಬಿಡುಗಡೆ ಮಾಡಿದುದರಿಂದ ಮಾರುಕಟ್ಟೆಯಲ್ಲಿ ಅದರ ಬಗ್ಗೆ ಹೆಚ್ಚು ತಿಳಿವಿರಲಿಲ್ಲ. (Standardised ಹಾಲು ಟೊನ್ದ ಹಾಲಿಗಿಂತ ಹೆಚ್ಚು ಕೊಬ್ಬಿನಂಶ ಹೊಂದಿದ "ದಪ್ಪ ಹಾಲು"). ಖಾಸಗಿ ರಂಗದ ಎರಡು ಬ್ರಾಂಡ್ ಗಳು ಈ ವರ್ಗದಲ್ಲಿ ನಂದಿನಿಗಿಂತ ಹೆಚ್ಚು ಪ್ರಬಲವಾಗಿದ್ದವು. ಸಾಮಾನ್ಯ ಗ್ರಾಹಕರು ಹೆಚ್ಚು ಪ್ರಚಾರದಲ್ಲಿರುವ ನಂದಿನಿಯ Toned ಹಾಲನ್ನೂ ಖಾಸಗಿ ವಲಯದ Standardised ಹಾಲನ್ನು ಹೋಲಿಸಿ ನಂದಿನಿ ಹಾಲು ತೆಳು ಎನ್ನುವ ಅಭಿಪ್ರಾಯ ತಳೆದಿದ್ದರು. ಇದರಿಂದ ನಂದಿನಿಯ Toned ಹಾಲಿನ ಮಾರಾಟದಲ್ಲಿ ವ್ಯತ್ಯಯವಾಗದಿದ್ದರೂ ಬ್ರಾಂಡ್ ಮೌಲ್ಯ ಸೊರಗಿತ್ತು. ನಗರ ವಲಯದ ಗ್ರಾಹಕರು ಕ್ಷೀಣ ಪ್ರಮಾಣದಲ್ಲಿ ಖಾಸಗಿ ಬ್ರಾಂಡ್ ಗೆ ಪರಿವರ್ತಿತರಾಗುತ್ತಿದ್ದರು. 

ಇಷ್ಟೆಲ್ಲಾ ಗೊಂದಲಗಳ ನಡುವೆಯೂ ಸಂಘವು ನಂದಿನಿಯ ಹೆಚ್ಚು ಬೆಲೆಯ "ಪೂರ್ಣ ಕೆನೆಯುಕ್ತ ಹಾಲನ್ನು" ಮಾರುಕಟ್ಟೆಗೆ ಬಿಡುಗಡೆ ಮಾಡಲೂ ಸಜ್ಜಾಗಿತ್ತು. ಈಗಾಗಲೇ ಗದ್ದಲವಿಲ್ಲದೆ ಮಾರುಕಟ್ಟೆಯಲ್ಲಿರುವ ನಂದಿನಿ Standardised ಹಾಲನ್ನು ಬಲಪಡಿಸದೆ ನಂದಿನಿ "ಪೂರ್ಣ ಕೆನೆಯುಕ್ತ ಹಾಲನ್ನು" ಬಿಡುಗಡೆ ಮಾಡಿದರೆ ಇದು ನೇರ ಖಾಸಗಿ ವಲಯದ Standardised ಹಾಲಿಗೆದುರಾಗಿ ಬಿದ್ದು ವಿಫಲವಾಗುವ ಅಪಾಯ ತೀವ್ರವಾಗಿತ್ತು. 

ಈ ಎಲ್ಲ ಹಿನ್ನೆಲೆಯನ್ನು ಗಮನದಲ್ಲಿರಿಸಿ ಒಂದು ಜಾಹಿರಾತು ಅಭಿಯಾನವನ್ನು ನಾವು ರಚಿಸಿ ದ.ಕ.ಸಹಕಾರಿ ಹಾಲು ಉತ್ಪಾದಕರ ಸಂಘಕ್ಕೆ ತೋರಿಸಿದ್ದೆವು. ಅದು ಅಹುದೆನಿಸಿಕೊಂಡು ಪ್ರಕಟವಾಗಿತ್ತು. 

ಬಳಿಕದ ವರ್ಷಗಳಲ್ಲೂ ನಾವು ನಂದಿನಿಗಾಗಿ ರಚಿಸಿದ ಹಲವು ಜಾಹಿರಾತು ವಿನ್ಯಾಸಗಳೂ ಇಲ್ಲಿವೆ.